Thursday, April 30, 2015

ಪಿತಾಜಿ ನಿಮ್ಮ ನೆನಪಿನಲ್ಲಿ



ತುಂಬಾ ದಿನಗಳ ನಂತರ ನಿಮಗೆ ಪತ್ರ ಬರೀತಿದೀನಿ. ನಿಮ್ಮ ಬೆಂಬಲ, ಆಶೀರ್ವಾದ, ಪ್ರೀತಿ ಮತ್ತು ನಿಮ್ಮ ಜೀವನದಿಂದ ದೊರೆತ ಸ್ಪೂರ್ತಿಯಿಂದಾಗಿ ನಾನು ಸಾಗಿ ಬಂದ ಹಾದಿಯಲ್ಲಿ, ಇಲ್ಲಿಯವರೆಗಿನ ನನ್ನ ಎಲ್ಲಾ ಜನ್ಮದಿನಗಳಿಗಿಂತಲೂ ಇಂದಿನದು ವಿಶೇಷವೆನಿಸುತ್ತಿದೆ.
ಬಹುಶಃ ಇನ್ನು ಇದು ನನ್ನಿಂದ ಸಾಧ್ಯವಾಗೋದಿಲ್ಲ.. ಇದನ್ನು ಇಲ್ಲಿಗೆ ನಿಲ್ಲಿಸಿಬಿಡೋಣ ಅಂತ ಅನಿಸಿದಾಗೆಲ್ಲಾ ನೀವು ಮುನ್ನಡೆಸಿದಿರಿ.. ವಿಜಯ್, ಅನಿಲ್ ಸರ್, ಸೋಮ, ಶಿವು-ಪವಿತ್ರ, ಪ್ರಶಾಂತ್, ಅಖಿಲಾ, ಹರಿ ಎಂಬ ಮೂರ್ತ ರೂಪಗಳ  ಮೂಲಕ ಈ ಸಿನೆಮಾ ದಡ ಸೇರುವಂತೆ ಮಾಡಿದಿರಿ. ನಾನು ಸಂಪೂರ್ಣವಾಗಿ ಸೋತು ಹೋದೆ ಎಂದನಿಸುವಾಗಲೆಲ್ಲಾ.. ಇವರಲ್ಲಿ ಯಾರೋ ಒಬ್ಬರ ಮೂಲಕ ಮೇಲೆತ್ತಿದಿರಿ.. ಮುನ್ನಡೆಸಿದಿರಿ. ಅದರ ಫಲಿತಾಂಶ ಇಂದು ನಾನು..
ಹಾಗಂತ ನಾನೇನೋ ದೊಡ್ಡ ಸಾದನೆ ಮಾಡಿದ್ದೇನೆ ಎಂದಲ್ಲ. ಆದರೆ ತೀರಾ ಮೊನ್ನೆ-ಮೊನ್ನೆಯವರೆಗೆ ‘ಯಾರೋ’ ಆಗಿದ್ದ ನಾನು ಇಂದು ‘ಓ ಅವ್ನು’ ಅನ್ನೋ ಹಂತಕ್ಕೆ ಬಂದಿದೀನಿ.. ಇದಕ್ಕೆ ಕಾರಣ ‘ನೀವು’.
ಕಳೆದ ವರ್ಷ ಇದೇ ಸಮಯದಲ್ಲಿ ಈ ಸಿನೆಮಾದ್ ಒತ್ತಡವನ್ನು ತಡೆಯಲಾಗದೆ ಗೊತ್ತು ಗುರಿ ಇಲ್ಲದೆ ಹುಚ್ಚನಂತೆ ನಾಂದೇಡ್, ಇಟಾರ್ಸಿ ವರೆಗೂ ಹೋಗಿ.. ಮುಂದೆಲ್ಲಿ ಎಂದು ಯೋಚಿಸುತ್ತಾ.. ಕೊನೆಗೆ ಪರಿಹಾರ ಇಲ್ಲಿಯೇ ಹುಡುಕಬೇಕೆಂದು ವಾಪಸ್ ಬೆಂಗಳೂರಿಗೆ ಬಂದಿದ್ದು. ಬರುತ್ತಾ ದಾರಿ ಮಧ್ಯೆದಲ್ಲೇ ಕನಸಿನ ಕೂಸಾದ ‘ಹರಿವು’ ಪೋಸ್ಟರ್ ರಿಲೀಸ್ ಮಾಡಿ ಇಂದಿಗೆ ಒಂದು ವರ್ಷ. ಆಗ ಗೆಳೆಯರ ಹಾರೈಕೆಗಳು ಅಶ್ಟು ಬಂದಾಗಲೂ ಖಂಡಿತ ಒಂದು ವರ್ಷದ ನಂತರ ನಮ್ಮ ಸಿನೆಮಾ ಈ ಹಂತಕ್ಕೆ ಹೋಗಿ ಮುಟ್ಟುವುದೆಂದು ಖಂಡಿತ ಅನಿಸಿರಲಿಲ್ಲ.
ಈ ಒಂದು ವರ್ಷದ ಅವಧಿಯಲ್ಲಿ ಸಾಗಿ ಬಂದ ಹಾದಿಯನ್ನೊಮ್ಮೆ ನೆನಪಿಸಿಕೊಂಡರೆ.. ಇಷ್ಟೆಲ್ಲಾ ಕಷ್ಟಗಳನ್ನೂ ಸಾಗಿ ಇಲ್ಲಯವರೆಗೂ ನಾನು ಹೇಗೆ ಬಂದೆ ಎಂಬ ಪ್ರಶ್ನೆ ಮಾತ್ರ ಉಳಿಯುತ್ತದೆ. ಕಾರಣ ಎಂತೆಂತಾ ಅನುಭವಗಳು.. ಜೊತೆಗಿದ್ದವರು ತುಂಬಾ ಆತ್ಮೀಯವಾಗಿ ಮುನ್ನಡೆಯುವ ಮಾತನಾಡಿದ್ದವರ ಮುಖವಾಡ ಕಳಚಿದಾಗ ಆಗಿದ್ದ ಆಘಾತ, ಎದುರಿಸಿದ ಆತಂಕ, ಮುಂದೆ ಸಾಗಿದಂತೆಲ್ಲಾ.. ಒಂದಲ್ಲಾ ಒಂದು ರೀತಿಯಲ್ಲಿ ಎದುರಾದ ಸೋಲುಗಳು .. ನಾನು ಆಯ್ಕೆ ಮಾಡಿಕೊಂಡಿದ್ದ ಹಾದಿಯ ಬಗ್ಗೆನೇ ಸಂದೇಹ ಮೂಡುವಂತೆ ಮಾಡಿಬಿಟ್ಟಿದ್ದು ನಿಜ.
ಆದರೆ ಪಿತಾಜಿ ಅಂತಹ ಎಲ್ಲಾ ಹಂತಗಳಲ್ಲೂ ಯಾವುದೋ ಒಂದು ರೀತಿಯಲ್ಲಿ ನನ್ನ ಆಯ್ಕೆ ಸರಿಯಾಗಿದೆ ಎಂದು ನಿರೂಪಿಸುವಂತೆ ಮಾಡಿದಿರಿ. ಸೋಲುಗಳ ಮಧ್ಯೆಯೂ ಮುನ್ನಡೆಸುವಂತ ಗೆಳೆಯರನ್ನು ಹಾಗೂ ಆ ಗೆಳೆಯರ ಮೂಲಕ ಅಂದುಕೊಂಡಿದ್ದನ್ನು ಸಾದಿಸುವ, ಗುರಿಯನ್ನು ದಡ ಸೇರುವಂತೆ ಮಾಡಿದಿರಿ. ಥ್ಯಾಂಕ್ಯೂ ಪಿತಾಜಿ. ಎಲ್ಲಾ ಕಷ್ಟ, ನೋವುಗಳನ್ನು ಮರೆಸುವಂತೆ ರಾಷ್ಟ್ರ ಪ್ರಶಸ್ತಿ ಬಂದಿದೆ. ಇದು ಅಂತಿಮವಲ್ಲ ಆರಂಭ ಮಾತ್ರ. ಮುನ್ನಡೆಯುವ ಹಾದಿಯನ್ನು ಸ್ಪಷ್ಟಗೊಳಿಸುವುದರ ಜೊತೆಗೆ ಇನ್ನೂ ಹೆಚ್ಚು ಜವಾಬ್ದಾರಿ ಬಂದಿದೆ ಎನ್ನುವ ಪ್ರಜ್ಞೆ ನನಗಿದೆ. ಈ ಜವಾಬ್ದಾರಿಯ ಅರಿವು ಸದಾ ಇರುವಂತೆ ನನ್ನ ಆಶೀರ್ವದಿಸಿ.


ಪ್ರಶಸ್ತಿ ಬಂದಿದೆ ಎಂದು ಗೊತ್ತಾದ ಮೇಲೆ ನಿಮ್ಮ ಬಳಿ ಬಂದಿದ್ದಾಗ ನಿಮ್ಮ ನೆರಳಿನಲ್ಲಿ ಕೂತಾಗ ದೊರೆತ ಸಾರ್ಥಕ ಭಾವ ಸದಾ ನನ್ನಲ್ಲಿ ಹೀಗೆ ಇರಲಿ. ಈಗ ದೊರೆತಿರುವ ಫಲಿತಾಂಶ ಮತ್ತಷ್ಟು ದೊಡ್ಡ ಗುರಿಗಳತ್ತ ಸಾಗುವ ಧೈರ್ಯ, ಸ್ಪಷ್ಟತೆ ನನ್ನಲ್ಲಿ ಮೂಡಲಿ ಎಂದು ಆಶೀರ್ವದಿಸಿ. ನಿಮಗೆ ನೀಡಿರುವ ಮಾತುಗಳಲ್ಲಿ ಉಳಿದಿರುವುದನ್ನು ನೆರವರೇಸಲು ಬೇಕಾದ ಮನೋಶಕ್ತಿ ನನ್ನಲ್ಲಿ ಎಂದಿಗೂ ಕಡಿಮೆ ಆಗದಿರಲಿ.
ನೀವು ನಿಮ್ಮ ಬದುಕನ್ನು ಯಾರ ಹಂಗೂ ಇಲ್ಲದೆ ನಿಮ್ಮ ಶಕ್ತಿಯ ಮೇಲೆ ರೂಪಿಸಿಕೊಂಡಿರುವುದೇ ನನಗೆ ಸ್ಪೂರ್ತಿ. ನಿಮ್ಮ ಆಶೀರ್ವಾದದಿಂದ ನನ್ನ ಬದುಕನ್ನು ನಾನೇ ರೂಪಿಸಿಕೊಳ್ಳುವೆ ಎಂಬ ಆತ್ಮವಿಶ್ವಾಸ ನನ್ನಲ್ಲಿ ಮೂಡುತ್ತಿದೆ. ಜೊತೆಗೆ ಗೆಳೆಯರ ಹಿರಿಯರ ಬೆಂಬಲವೂ ಇದೆ. ನಾನು ನಡೆಯುತ್ತಿರುವ ಹಾದಿಯ ಪ್ರತೀ ಹೆಜ್ಜೆಯಲ್ಲೂ ನಿಮ್ಮ ನೆರಳು ನನ್ನನ್ನು ಕಾಪಾಡುತ್ತಿರಲಿ.
ಇತೀ ನಿಮ್ಮ ಮಗ

ಬಾಬು-ನಾನ್ನ

Monday, November 17, 2014

ಕನಸು ನನಸಾದ ದಿನ

ನಾನೂ ಸಿನೆಮಾ ನಿರ್ದೇಶನ ಮಾಡಬೇಕೆಂಬ ಕನಸು ಮೊಳಕೆಯೊಡೆದದ್ದೇ, ಮೊದಲ ಬಾರಿಗೆ ಬೆಂಗಳೂರಿನ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗವಹಿಸಿದ್ದಾಗ. ಬೆಂಗಳೂರು ಹೊರತು ಪಡಿಸಿ ಬೇರೆಲ್ಲೂ ಭಾಗವಹಿಸದಿದ್ದರೂ, ಇಲ್ಲಿನ ಚಿತ್ರೋತ್ಸವಕ್ಕೆ ಪ್ರತೀ ಬಾರಿ ಹೋದಾಗಲೂ,  ಅಲ್ಲಿ ಪ್ರದರ್ಶಿತವಾಗುತ್ತಿದ್ದ ಜಗತ್ತಿನ ನಾನಾ ದೇಶಗಳ ಅದ್ಬುತ ಸಿನೆಮಾಗಳನ್ನು ನೋಡುತ್ತಿದ್ದಾಗ ಮುಂದಿನ ಬಾರಿಯಾದರೂ ನನ್ನ ಸಿನೆಮಾ ಇಂತಹ ಸಿನೆಮಾಗಳ ಮಧ್ಯೆ ಪ್ರದರ್ಶಿಸುವಂತಿದ್ದರೆ ಎಂಬ ಆಸೆ ಚಿಗುರೊಡೆಯುತ್ತಲೇ ಬಂತು. ಈ ಆಸೆಯನ್ನು ಅಪ್ಪನೊಂದಿಗೆ ಬಹಳಷ್ಟು ಬಾರಿ ಹೇಳಿಕೊಂಡಿದ್ದೆ. ಅದಕ್ಕಾಗಿ ತುಂಬಾ ಪ್ರಯತ್ನ ಪಟ್ಟಿದ್ದೆ. ಅದಕ್ಕೆ ಅಪ್ಪನ ಮುಕ್ತ ಬೆಂಬಲವೇ ನನಗೆ ದೊಡ್ದ ಶಕ್ತಿಯಾಗಿತ್ತು. ಹಾಗಾಗಿ ನನ್ನಾಸೆ ಈಡೇರಿಸಿಕೊಳ್ಳಲು ೨೦೦೯ರಲ್ಲೇ ಪ್ರಯತ್ನಿಸಿದನಾದರೂ ಅದು ಈಡೇರದೆ ಪ್ರಾರಂಭವಾಗುವ ಮೊದಲೇ ಪರಿಸಮಾಪ್ತಿಯಾಗಿತ್ತು.. ಆ ನಂತರ ೨೦೧೦ರಲ್ಲಿ ನನಗೆದುರಾದ ದೊಡ್ಡ ಆಘಾತ.. ಅಪ್ಪ ಭೌತಿಕವಾಗಿ ನನ್ನ ಬಿಟ್ಟು ಹೋದದ್ದು. ಆನಂತರ ಬಹುತೇಕ ನನ್ನ ಸಿನೆಮಾ ಕನಸನ್ನು ಅಲ್ಲೇ ಚಿವುಟಿ ಹಾಕಿ ಅನಿರೀಕ್ಷಿತವಾಗಿ ಎದುರಾಗಿದ್ದ ಜವಾಬ್ದಾರಿಯ ಕಡೆಗೆ ಗಮನ ಹರಿಸಲು ಪ್ರಾರಂಭಿಸಿದೆ. ಆದರೆ ಒಳಗಿನ ಆಸೆ/ಕನಸು ಹಾಗೂ ಅಪ್ಪನೊಂದಿಗೆ ಮಾಡಿದ್ದ ವಾದ ಹಂಚಿಕೊಂಡಿದ್ದ ಕನಸು, ಕೊಟ್ಟಿದ್ದ ಮಾತು ಒಳಗೊಳಗೆ ಸಿನೆಮಾ ನಿರ್ದೇಶನದ ಆಸೆಯನ್ನು ಹಾಗೆ ಜೀವಂತವಾಗಿರಿಸಿತ್ತು. ಇಂತಹ ಗೊಂದಲದ ಮಧ್ಯೆ ಡಾ.ಆಶಾ ಬೆನಕಪ್ಪನವರ ಅಂಕಣವೊಂದು ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದ್ದು ನನ್ನ ಕಣ್ಣಿಗೆ ಬಿತ್ತು. ಅದನ್ನು ಓದುತ್ತಾ ಹೋದಂತೆ ನನ್ನ ನಾನೇ ಪ್ರಶ್ನಿಸಿಕೊಳ್ಳುತ್ತಾ, ನನ್ನ ಜೀವನದೊಂದಿಗೆ ತಳುಕು ಹಾಕುತ್ತಾ ಸಾಗಿದೆ. ಸುಮಾರು ಮೂರು ತಿಂಗಳ ಕಾಲ ಮನದಲ್ಲೇ ಆಳವಾಗಿ ಮೂಡಿದ್ದ ಆಘಟನೆ ಕ್ರಮೇಣ ನನ್ನ ಸಿನೆಮಾ ಯಾವುದಾಗಬೇಕೆಂಬುದರ ಬಗ್ಗೆ ಅಸ್ಪಷ್ಟವಾಗಿ ಮೂಡತೊಡಗಿತು.



ಹೀಗೆ ಪ್ರಾರಂಭವಾದ ‘ಹರಿವು’ ಹಲವಾರು ಅಡೆತಡೆಗಳನ್ನು ದಾಟಿ ಇಂದು ನನ್ನ ಇಷ್ಟು ವರ್ಷಗಳ ಕನಸನ್ನು ನನಸಾಗಿಸುತ್ತಿದೆ. ಎಲ್ಲಿ ನನ್ನ ಕನಸಿಗೆ ರೆಕ್ಕೆ ಪುಕ್ಕ ಮೂಡುತ್ತಾ ಸಾಗುತ್ತಾ ಬಂದಿತ್ತೋ ಅಲ್ಲೇ ಈ ವರ್ಷ ನಮ್ಮ ‘ಹರಿವು’ ಪ್ರದರ್ಶಿತವಾಗುತ್ತಲಿದೆ. ಈ ಕನಸು ನನಸಾಗುವಲ್ಲಿ ನಮ್ಮ ತಂಡದ ಪ್ರತಿಯೊಬ್ಬರ ಶ್ರಮವು ಮುಖ್ಯವಾಗುತ್ತದೆ. ನಮ್ಮ ತಂಡವಿಲ್ಲದೆ ಖಂಡಿತ ಇದು ಸಾಧ್ಯವಾಗುತ್ತಿರಲಿಲ್ಲ. ಇದರ ಪೂರ್ತಿ ಶ್ರೇಯಸ್ಸು ನಮ್ಮ ಇಡೀ ತಂಡಕ್ಕೆ ಸಲ್ಲುತ್ತದೆ.
ಸ್ಥಳ ಹಾಗೂ ಸಮಯದ ಅಭಾವದಿಂದ ಸಾಕಷ್ಟು ಮಿತ್ರರನ್ನು ನಮ್ಮ ಸಿನೆಮಾದ ಪೂರ್ವಭಾವಿ ಪ್ರದರ್ಶನಕ್ಕೆ ಆಹ್ವಾನಿಸಲಾಗಿರಲಿಲ್ಲ. ಅಲ್ಲಿ ತಪ್ಪಿಸಿಕೊಂಡವರು ಹಾಗೂ ಉಳಿದ ನಿಮಗೆಲ್ಲರಿಗೂ ವಿನಯಪೂರ್ವಕವಾದ ಆಹ್ವಾನ ದಯವಿಟ್ಟು ಈ ಬಾರಿಯ ಚಲನ ಚಿತ್ರೋತ್ಸವಕ್ಕೆ  ಬಂದು ನೋಡಿ ನಮ್ಮ ಈ ಚೊಚ್ಚಲ ಪ್ರಯತ್ನಕ್ಕೆ ಪ್ರೋತ್ಸಾಹ ನೀಡಿ.

-ಮಂಸೋರೆ

Sunday, August 24, 2014

ಇದು ಸೋಲಾ ಅಥವಾ ಸಾಧಿಸಿದೆನಾ?

ಪಿತಾಜಿ,,
ನಾಲ್ಕು ವರ್ಷಗಳು ಕಳೆದೇ ಹೋಯ್ತು.. ನಿಮ್ಮ ನೆನಪುಗಳು ಮಾತ್ರ ಹಾಗೇ ಉಳಿದಿವೆ.. ಮೊದಲಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು.. ಪ್ರೀತಿಯ ಅಲೆಯಲ್ಲಿ ಮುಳುಗಿ ಹೋಗಿ ನಿಮ್ಮ ನೆನಪು ಹಾಗೂ ಅದು ನೀಡುತ್ತಿದ್ದ ಆತ್ಮ ಸ್ಥೈರ್ಯವನ್ನು ಕಡೆಗಣಿಸಿಯೇ ಈ ಒಂದು ವರ್ಶ ಕಳೆದು ಬಿಟ್ಟೆ. ಅದು ಒಂಟಿತನದಿಂದ ಮೂಡಿದ ಅಸಹಾಯಕತೆಯಾ? ಅಥವಾ ಈ ಮನಸಿನ ಹೆಸರಲ್ಲಿ ಅನುಭವಿಸಿದ ದೇಹ ದೌರ್ಬಲ್ಯವಾ ಗೊತ್ತಿಲ್ಲ.. ಆದರೂ ಪ್ರೀತಿಯ ಹೆಸರಿನಿಂದಾಗಿ ಬಹು ಪಾಲು ಸಮಯವನ್ನು ಅದನ್ನು ಉಳಿಸಿಕೊಳ್ಳುವ ಬರದಲ್ಲಿ ಸಾಕಷ್ಟು ನೋವನ್ನು ಅನುಭವಿಸಿದೆ. ಆ ನೋವಿನಿಂದಾಗಿ ಹುಚ್ಚನಾಗಿ ಅಲೆದೂ ಬಿಟ್ಟೆ.. ಆ ಮೂರು ದಿನಗಳು ರೈಲಿನಲ್ಲಿ ಅಲೆಮಾರಿಯಂತೆ, ಹುಚ್ಚನಂತೆ, ಜನ್ರಲ್ ಕಂಪಾರ್ಟ್ನಲ್ಲಿ ಕೂತು ಇಲ್ಲಿಂದ ನಾಂದೇಡ್, ಅಲ್ಲಿಂದ ಇಟಾರ್ಸಿ.. ಮತ್ತೆ ವಾಪಸ್ಸು ಬೆಂಗಳೂರು..
ಆದರೂ ಮನಸ್ಸಿನ ಮೇಲೆ ಹಿಡಿತ ಸಾಧಿಸಲಾಗಲಿಲ್ಲ. ನಿಜಕ್ಕೂ ನಾನು ಪ್ರೀತಿಯನ್ನು ಉಳಿಸಿಕೊಳ್ಲಲು ಒದ್ದಾಡಿದ್ದಾ ಅಥವಾ ಆಕೆಗೆ ಏನಾಗುತ್ತದೆಯೋ ಎಂಬ ಆತಂಕದಲ್ಲಿ ನನಗೆ ಎಷ್ಟೇ ನೋವಾದರೂ ತಡೆದುಕೊಂಡೆನಾ? ಅಥವಾ ಅದು ನನ್ನ ದೌರ್ಬಲ್ಯವಾ ಒಂದೂ ಅರ್ಥವಾಗುತ್ತಿಲ್ಲ. ಅರ್ಥವಾಗಿರುವುದು ಇಷ್ಟೇ.. ಈ ಪ್ರೀತಿಗಾಗಿ ಇಷ್ಟು ವರ್ಷಗಳು ಪಾಲಿಸಿಕೊಂಡು ಬಂದಿದ್ದ ಎಷ್ಟೊ ಸಿದ್ದಾಂತಗಳಿಗೆಲ್ಲ ಹೊದಿಕೆ ಹೊದಿಸಿಬಿಟ್ಟು ಆಕೆಗೆ ಸಾಕಷ್ಟು ಸಮಯ ಮೀಸಲಿರಿಸಲು ಒದ್ದಾಡಿದೆ.
ಇಷ್ಟೆಲ್ಲಾ ಒದ್ದಾಟಗಳ ನಡುವೆಯೂ ಇಂದು ಈ ಹಂತದವರೆಗೆ ಬಂದು ಮುಟ್ಟಿದ್ದೇನೆ.

ನಿಮಗಾಗಿ ಹಾಗೂ ನಿಮ್ಮ ನೆನಪಲ್ಲಿ ಮಾಡಬೇಕೆಂದು ನಿರ್ಧರಿಸಿದ್ದ ‘ಹರಿವು’ ಇನ್ನು ಕೆಲವು ಘಂಟೆಗಳಲ್ಲಿ ಮದ್ರಾಸಿನ ಕ್ಯೂಬ್ ಆಫೀಸ್ ಮುಟ್ಟುತ್ತದೆ. ಕಾಕತಾಳೀಯವೋ ಎಂಬಂತೆ ನನ್ನ ಕೈಯಿಂದ ಧನುಶ್ ಕೈಗೆ ಸೌಂಡ್ ಸಿಡಿ ಕೊಟ್ತ ಸಮಯ ನೀವು ಉಸಿರು ತೊರೆದ ಸಮಯ ಆಸುಪಾಸು ಒಂದೇ ಆಗಿತ್ತು.

ನನ್ನಿಂದಲೋ ಅಥವಾ ನನ್ನ ನಿರ್ಧಾರ ಆಯ್ಕೆಗಳಲ್ಲಿದ್ದ ಲೋಪವೋ.. ಅಂದುಕೊಂಡಂತೆ ೨೪ ರಂದು ಮೊದಲ ಪ್ರದರ್ಶನ ಏರ್ಪಡಿಸಲು ಸಾಧ್ಯವಾಗದೇ ಸೋತು ಬಿಟ್ಟೆ.
ಆದರೆ ಇಲ್ಲಿವರೆಗೂ ಬಂದು ತಲುಪುತ್ತದೆ ಎಂಬ ನಂಬಿಕೆಯಿಲ್ಲದೆಯೇ ‘ಹರಿವು’ ಸೆನ್ಸಾರ್ ಆಗುವ ಕೊನೆಯ ಪ್ರಕ್ರಿಯೆಯಲ್ಲಿದೆ.. ಅದಾದರೂ ಅಂದುಕೊಂಡಂತೆ ಪೂರ್ಣಗೊಳ್ಳುವುದೋ ಇಲ್ಲವೋ ಗೊತ್ತಿಲ್ಲ. ಆದರೆ ನನ್ನ ಕೈಲಾದಷ್ಟೂ ಕೊನೆಯ ಹಂತದವರೆಗೂ ಹೋರಾಡುತ್ತೇನೆ. ಕಾಸೊಂದಿದ್ದರೆ ಇದೆಲ್ಲ ಸಮಯಕ್ಕೆ ಸರಿಯಾಗಿ ಆಗುತ್ತಿತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಈಗದೆಲ್ಲಾ ಚಿಂತಿಸುವಷ್ಟು ಸಮಯ ಉಳಿದಿಲ್ಲ. ಏನಾದರಾಗಲಿ ಈ ‘ಹರಿವು’ ಪೂರ್ಣಗೊಳ್ಲಲೇ ಬೇಕು.

ಇದನ್ನು ಹತ್ತು ಜನರಿಗೆ ತೋರಿಸುವುದರ ಮೂಲಕ ಬರುವ ಪ್ರತಿಕ್ರಿಯೆಗಳಲ್ಲಿ ನಿಮ್ಮ ಇರುವನ್ನು ಶಾಶ್ವತಗೊಳಿಸಬೇಕು ಎಂಬ ನನ್ನ ನಿರ್ಧಾರ ಪೂರ್ಣಗೊಳ್ಳಲೇ ಬೇಕು.. ಹೋರಾಟ ಸಾಗಿದೆ.. ಇದರ ಫಲಿತಾಂಶ ನೀವೆ ನಿರ್ಧರಿಸಿ.. ಅಲ್ಲಿಯವರೆಗೂ ನನ್ನೊಳಗೆ ಇದು ಸೋಲಾ? ಅಥವಾ ಅಂದುಕೊಂಡದ್ದನ್ನು ಸಾಧಿಸಿದೆನಾ ಎಂಬ ಜಿಜ್ಞಾಸೆ ಮುಂದುವರೆಯುತ್ತಲೇ ಇರಲಿ

ಇತೀ ನಿಮ್ಮ
ಬಾಬು/ ನಾನ್ನ

Tuesday, February 4, 2014

ಎರಡು ಹೈದ್ರಾಬಾದಿ ಬಿರ್ಯಾನಿ, ಒಂದು ಫುಲ್ ಪ್ಲೇಟ್ ಕಬಾಬು

ವ್ಯಕ್ತಿ೧ : ಈ ಮುಸ್ಲಿಮ್ಮರು ಭಾರತಕ್ಕೆ ಬಂದು ನಮ್ ಹಿಂದು ಸಂಸ್ಕೃತಿನೇ ಹಾಳಾಗೋಯ್ತು...

ವ್ಯಕ್ತಿ೨ : ಹೌದು .. ಇವರು ನಮ್ ಹಿಂದುಗಳನ್ನೆಲ್ಲಾ ಬಲವಂತವಾಗಿ ಮತಾಂತರ ಮಾಡಿದ್ರು.. ನಮ್ ಸಂಪತ್ತನ್ನೆಲಾ ದೋಚಿದ್ರು.. ದೇವಸ್ಥಾನಗಳನ್ನೆಲ್ಲಾ ಹೊಡೆದು .. ತಮ್ಮ ಮಸೀದಿ ಕಟ್ಟಿಕೊಂಡ್ರು.. ಆದರೂ ನಾವ್ ಏನ್ ಮಾಡಕ್ಕಾಗ್ಲಿಲ್ಲ..

ವ್ಯಕ್ತಿ೧ : ಅಷ್ಟಾದ್ರೂ ... ಈ ನನ್ *** ಸಾಕಾಗ್ಲಿಲ್ಲ. ಇಂಡಿಯಾ ಡಿವೈಡ್ ಆದಾಗ ಇವ್ರಿಗೆ ಅಂತ ಬೇರೆ ದೇಶನೆ ಕೊಟ್ಟು ಹಾಳಾಗೋಗಿ ಅಂತಂದ್ರೆ .. ಅಲ್ಲಿಗೂ ಪೂರ್ತಿಯಾಗಿ ತೊಲಗ್ಲಿಲ್ಲ.. ಏನೋ ಅವ್ರಪ್ಪನ ಆಸ್ತಿ ಅನ್ನೋ ತರಾ ಕೆಲವ್ರು ಇಲ್ಲೇ ಝಂಡಾ ಊರ್ಕೊಂಡು ಕೂತ್ಬಿಟ್ರು.. 

ವ್ಯಕ್ತಿ೨ : ಕೂತ್ಕೊಂಡವ್ರು..  ಅದಿಮ್ಕಂಡು ಇರೋದು ಬಿಟ್ಟು ಪಾಕಿಸ್ತಾನದವ್ರ್ ಜೊತೆ ಸೇರ್ಕೊಂಡ್ ಇಲ್ಲಿ ಭಯೋತ್ಪಾದನೆಗೆ ಕುಮ್ಮಕ್ಕು ನೀಡ್ತಿದ್ದಾರೆ... 

ವ್ಯಕ್ತಿ೧ : ಇವ್ರು ಮಾಡಿರೋ ರಾದ್ಧಾಂತಗಳು ಒಂದಾ ಎರಡಾ.. ಇಡೀ ನಮ್ ಹಿಂದೂ ಸಂಸ್ಕೃತೀನೆ ಹಾಳ್ ಮಾಡ್ಬಿಟ್ಟಿದ್ದಾರೆ...

ವ್ಯಕ್ತಿ ೩ : ಏನ್ ನೀವಿಬ್ರು ಹೇಳ್ತಿರೋದು.. ನಿಜ್ವಾಗ್ಲು ಇಷ್ಟೆಲ್ಲಾ ಮಾಡಿದ್ದಾರ ಮುಸ್ಲಿಮ್ಮೋರು..

ವ್ಯಕ್ತಿ ೧ : ಹೂ ಅಂತೀನೀ .. ಹೇಳ್ತಾ ಹೋದ್ರೆ ಘಂಟೆ, ದಿನಾ ಅಲ್ಲಾ,, ತಿಂಗಳು .. ವರ್ಷಗಳೇ ಬೇಕಾಗುತ್ತೆ ಆ ***** ಳು ಮಾಡಿರೋ ಹಲ್ಕಾ ಕೆಲಸಗಳ ಬಗ್ಗೆ ಹೇಳೋದಿಕ್ಕೆ..

ವ್ಯಕ್ತಿ ೩ : ಹೌದಾ ನನಗೂ ತಿಳ್ಕೋಬೇಕು ಅನ್ನೋ ಆಸೆ ಇದೆ.. ಆದರೆ ನೀವ್ ಹೇಳ್ತಿರೋದು ನೋಡಿದ್ರೆ  ಕೇಳಿಸ್ಕೊಳ್ಳೋದಿಕ್ಕೆ ತುಂಬಾನೆ ಟೈಮ್ ಬೇಕಾಗುತ್ತೆ ಅನ್ಸುತ್ತೆ.. ಮೊದ್ಲು ಊಟ ಆರ್ಡರ್ ಮಾಡಿಬಿಡೋಣ .. ಆಮೇಲೆ ಎಷ್ಟೊತ್ತಾದ್ರು ಮಾತಾಡ್ಬಹುದು..

ವ್ಯಕ್ತಿ ೧: ಹೌದು ಅದೂ ಸರೀನೆ.. (ಮಾಣಿ ನ ಕರೀತಾರೆ)

ಮಾಣಿ : ಏನ್ ಬೇಕ್ ಸರ್...?

ವ್ಯಕ್ತಿ ೩ : ನನಗೆ ಸೌತ್ ಇಂಡಿಯನ್ ಮಿಲ್ಸ್ ಸಾಕು..

(ವ್ಯಕ್ತಿ೧ ಮತ್ತು ವ್ಯಕ್ತಿ೨ ಪರಸ್ಪರ ನೋಡಿ ನಗ್ತಾರೆ)

ವ್ಯಕ್ತಿ ೨: ಈ ಹೋಟೆಲ್ ಗ್ ಬಂದು ಅನ್ನ ಸಾಂಬರ್ರು ಆರ್ಡರ್ ಮಾಡ್ತೀರಲ್ರೀ (ವ್ಯಂಗ್ಯ ನಗುವಿನೊಂದಿಗೆ)

ವ್ಯಕ್ತಿ ೧ : ಈ ಹೊಟ್ಲು ಬಿರಿಯಾನಿಗೆ ಫೇಮಸ್ಸು, ನೀವ್ ನಾನ್ವೆಜ್ ತಿಂತೀರಾ ತಾನೆ?

ವ್ಯಕ್ತಿ ೩: ಹೂ.. 

ವ್ಯಕ್ತಿ ೧: ಹಾಗಿದ್ರೆ ಇಲ್ಲಿ ನೀವು ಬಿರಿಯಾನಿ ಟೇಸ್ಟ್ ಮಾಡ್ಲೇ ಬೇಕು.. (ಮಾಣಿ ಕಡೆಗೆ ತಿರುಗಿ) ಎರಡು ಹೈದ್ರಾಬಾದಿ ಬಿರ್ಯಾನಿ, ಒಂದು ಫುಲ್ ಪ್ಲೇಟ್ ಕಬಾಬು, (ವ್ಯಕ್ತಿ ೨ ಕಡೆಗೆ ತಿರುಗಿ) ನಿಮಗೆ ಏನ್ ಬೇಕೋ ಹೇಳ್ಬಿಡಿ..

ವ್ಯಕ್ತಿ ೨: ನನಗೂ ಒಂದು ಬಿರಿಯಾನಿ... ಜೊತೆಗೆ ಒಂದು ಫುಲ್ ತಂದೂರಿ, ಮತ್ತೆ ಮೊಘ್ಹಲಾಯಿ ಚಿಕನ್ನು.. ಸ್ಪೈಸಿಯಾಗಿ ಇರ್ಬೇಕು.. ಆಯ್ತಾ....

(ಮಾಣಿ ಹೋಗ್ತಾನೆ)

ವ್ಯಕ್ತಿ ೧ : ಆ ನಾನ್ ಏನ್ ಹೇಳ್ತಾ ಇದ್ದೆ.. ಆ ಸಂಸ್ಕೃತಿ... ಹೌದು..... ಈ ನನ್ ***** ಳು ಬಂದು ನಮ್ ಹಿಂದೂ ಸಂಸ್ಕೃತೀನೆ ಹಾಳ್ ಮಾಡ್ಬಿಟ್ರೂ..........................................................

Saturday, August 24, 2013

ಮೂರು ವರ್ಷಗಳು..

ಪಿತಾಜಿ.. ಮೂರು ವರ್ಷಗಳು ಕಳೆಯಿತು.. ನೀವಿಲ್ಲದೆ ಹೇಗೆ ಕಾಲ ಓಡುತ್ತಿದೆ ಎಂದೇ ತಿಳಿಯುತ್ತಿಲ್ಲ.. ಈ ಮೂರು ವರ್ಷಗಳಲ್ಲಿ, ನಿಮಗೆ ಮಾತು ಕೊಟ್ಟಿದ್ದರಲ್ಲಿ ಅಂತೂ ಒಂದನ್ನು ನೆರವೇರಿಸಿದೆ ಎಂದು ಖುಷಿ ಪಡಬೇಕಾ? ಅಥವ ಉಳಿದದ್ದನ್ನು ನೆರವೇರಿಸಲಾಗದಿದ್ದಕ್ಕೇ ನನ್ನ ಮೇಲೇ ನಾನೇ ಬೇಸರಿಸಿಕೊಳ್ಳಬೇಕೆ.. ಗೊತ್ತಾಗ್ತಿಲ್ಲ.. ಮನಸಿಗೆ ವೇದನೆ ಹೆಚ್ಚುತ್ತಲೇ ಇದೆ.. ತೆಗೆದುಕೊಳ್ಳುತ್ತಿರುವ ನಿರ್ಧಾರಗಳ ಮೇಲೆ ನನಗೆ ನಂಬಿಕೆ ಇಲ್ಲವಂತಾಗಿದೆ. ಹೋಗುತ್ತಿರುವ ದಾರಿ ಸರಿನಾ ತಪ್ಪಾ ಅಂತ ನಿರ್ಧಾರ ಮಾಡೋ ಸಾಮರ್ಥ್ಯಾನೆ ಕಳಕೊಂಡಿದೀನೇನೋ ಅಂತ ಅನಿಸ್ತಿದೆ.. ದಿನಗಳು ಕಳೆದಂತೆಲ್ಲ.. ನಾನು ದುರ್ಬಲನಾಗುತ್ತಿದ್ದೀನೇನೋ ಅಂತ ಅನಿಸಿಬಿಟ್ಟಿದೆ. ವರ್ಷದಿಂದ ವರ್ಷಕ್ಕೆ ಪರಿಸ್ಥಿತಿಗಳು ಪ್ರತಿಕೂಲವಾಗುತ್ತಿದೆಯೇ ಹೊರತು ಅನುಕೂಲಕರವಾಗುತ್ತಿಲ್ಲ. ಬಹುಶಃ ನನ್ನ ನಿಲುವು, ಅನಿಸಿಕೆ, ಅನುಭವ, ಸಿದ್ಧಾಂತಗಳಲ್ಲೇ ಏನೋ ತೊಂದರೆ ಇದೆಯೇನೋ ಅಂತ ಅನಿಸ್ತಿದೆ. ಇಂಥಾ ಟೈಮಲ್ಲಿ ನೀವಿರಬೇಕಿತ್ತು ಪಿತಾಜಿ.. ನಿಮ್ ಹತ್ರ ನನ್ ಎಲ್ಲಾ ನೋವು ಹೇಳ್ಕೋಬೇಕು ಅಂತ ಅನಿಸ್ತಿದೆ.. ನಿಮ್ಮನ್ನು ಗಟ್ಟಿಯಾಗಿ ತಬ್ಕೋಬೇಕು.. ನಿಮ್ಮ ಭುಜದ ಮೇಲೆ ತಲೆ ಒರಗಿಸಬೇಕು.. ನಿಮ್ಮ ಸಾಂತ್ವನದ ಮಾತುಗಳ ಕೊರತೆಯಿಂದಾಗಿ ನನ್ನ ಜೀವನದ ಗತಿಯೇ ಬದಲಾಗಿಬಿಟ್ಟಿದೆ... ಮಿಸ್ ಯು ಪಿತಾಜಿ..

//ಬಾಬು, ನಾನ್ನ

Thursday, January 24, 2013

ಸಾವಿನೆಡೆಗೊಮ್ಮೆ ಮುಖ ಮಾಡುವುದು ಹೇಡಿತನವಾ?

ಸಾವು.. ಸಾವು ಎಲ್ಲಾ ಸಮಸ್ಯೆಗಳಿಗೂ ಪರಿಹಾರವಲ್ಲ ಅಂತಾರಲ್ಲ... ಸಾವು ಸಮಸ್ಯೆಗಳಿಗೆ ಪರಿಹಾರವಲ್ಲವಾ? ಈಸ ಬೇಕು ಇದ್ದು ಜಯಿಸಬೇಕು. ಸಾವು ಪ್ರತಿಯೊಬ್ಬರು ಎದುರುಗೊಳ್ಳಲೇಬೇಕಾದ ಅಂತಿಮ ಘಟ್ಟವಾಗಿರುವಾಗ, ಸಾವು ಸಮಸ್ಯೆಗಳಿಗೆ ಹೇಗೆ ಪರಿಹಾರವಲ್ಲ?
ಪ್ರತಿ ಕ್ಷಣವೂ ಹೋರಾಡಿ ಕೊನೆಗೆ ದಕ್ಕುವುದಾದರೂ ಏನು?
ನೆಮ್ಮದಿಯ ಜೀವನ?
ನಂತರ?
ಏನೂ ಇಲ್ಲ..
 ಹೋರಾಟವೇ ಜೀವನವಾ?
ಛೇ.... :(
ಸಮಸ್ಯೆಗಳು ಪರಿಹಾರವಾಗದಿರುವುದಕ್ಕೆ ‘ನಾನೇ’ ಕಾರಣನಾ?
‘ನನ್ನದೇ’ ಚಿಂತನೆಗಳು ಸಮಸ್ಯೆಯ ಮೂಲ ಹುಡುಕಲು ಹೊರಟರೆ ಬಹುಶಃ ಎಂದಿಗೂ ‘ನಾನು’ ಕಾರಣವಾಗುವುದೇ ಇಲ್ಲವೇನೋ...
ಆದರೂ ಹೋರಾಟದ ನಂತರದ ಗೆಲುವಲ್ಲಿ ಯಾವುದೇ ಆಸಕ್ತಿ ಇಲ್ಲದಿರುವಾಗ, ಇದ್ದು ಮಾಡುವುದಾದರೂ ಏನು? ನನ್ನ ನಂಬಿದವರ ಗತಿ? ಯಾರನ್ನು ಯಾರೂ ನಂಬಿರುವುದಿಲ್ಲ ಎಂಬ ಅನುಭವ ಅಪ್ಪನ ಅಗಲುವಿಕೆ ಕಲಿಸಿಕೊಟ್ಟಿದೆಯಲ್ಲ,
ಸೋ ಯಾಕೊಮ್ಮೆ, ಸಾವಿನ ಸಂಗಾತಿಯನ್ನು ಅಪ್ಪಿಕೊಳ್ಳಬಾರದು..
‘ನನ್ನಿಂದ’ ‘ನಾನು’ ಹೆಣೆದುಕೊಂಡಿರುವ ಸಮಸ್ಯೆಗಳು ನನ್ನ ಬಂಧನದೊಳಗೆ ಸಿಲುಕಿ ನಲುಗಿ ಮರುಟಿ ಹೋಗಬಹುವ ಸಾಧ್ಯತೆಗಳು ನಿಚ್ಚಳವಾಗಿ ಕಾಣುತ್ತಿರುವಾಗ, ಆ ಪ್ರೀತಿಯ ಆಲಿಂಗನವನ್ನೇಕೆ ಬರಸೆಳೆದು ಅಪ್ಪಿಕೊಳ್ಳಬಾರದು...?
ಏನೇ ಯಶಸ್ಸು, ಹೆಸರು, ಹಣ ಮಾಡಿದರೂ ಅಂತ್ಯವಾದ ದೇಹದ ಮೇಲಿನ ಮೋಹ ಮಣ್ಣಾಗುವವರೆಗೆ ಮಾತ್ರ ತಾನೇ..? ಆ ನಂತರವೇನಿದ್ದರೂ ಅದ ಬಿಟ್ಟು ಹೋದ ನೆನಪುಗಳ ಮೆರವಣಿಗೆ, ಮರು ನೆನೆಯುವಿಕೆಯ ಭ್ರಮಾತ್ಮಕದ ಅಗೋಚರದೊಳಗೆ ರಮಿಸುವ ಕ್ಷಣಿಕ ಸುಖಗಳು ಮಾತ್ರವಲ್ಲವೇ...?
ಸಾಧನೆ, name n fame ಗೂ ಮೀರಿದ ಅನುಭೂತಿಗಳ ಆಯಸ್ಸಾದರೂ ಎಷ್ಟು ವರ್ಷ?
ಲೌಕಿಕ ಸಂಭಂದಗಳ ಹೆಣೆದ ಬಲೆಯ ಗಟ್ಟಿತನ ಎಲ್ಲಿಯವರೆಗೆ?
ಇಷ್ಟೇನಾ ಜೀವನ?
ಸಾವಿನೆಡೆಗೆ ಮುಖ ಮಾಡುವ ಹೇಡಿ ‘ನಾನಾದೆನಾ?’
ಆದರೂ ಒಮ್ಮೆ ಸಾವು ನೀಡಬಹುದಾದ ಶಾಶ್ವತ ಸುಖದ ಸುಪ್ಪತ್ತಿಗೆಯಲ್ಲೊಮ್ಮೆ ಮಲಗಿ ಬಿಡಲೆ?
ಹಾಗಾದಲ್ಲಿ ನನ್ನ ಈ ಪ್ರಶ್ನೆಯ ಉತ್ತರ ನನಗೆ ಸಿಗುದೆಂತು..

“ಸಾವಿನೆಡೆಗೊಮ್ಮೆ ಮುಖ ಮಾಡುವುದು ಹೇಡಿತನವಾ?”

//ಮಂಸೋರೆ

Thursday, December 6, 2012

ಜೀವ ಜಲ ಬತ್ತಿ ಎದೆ ಹಾಲು ಸೊರಗಿರಲು


ಸುರಿಯುವ ಮಳೆ
ನಿನ್ನೊಡಲ ಬರವ
ನೀಗುವುದೇ?
ಎಷ್ಟು ವರ್ಷಗಳಾಯಿತು
ನಿನ್ನೊಡಲ ಜೀವ ಸೆಲೆ
ಮೈದುಂಬಿ ಹರಿದು,
ದೇಹ ಹಸಿರ ಸೀರೆ ಉಟ್ಟು,
ನಿನ್ನ ಮಗುವಿನಾ
ಮೊಗವು ಆನಂದದೀ
ನಲಿದು..
ಎಷ್ಟು ವರ್ಷಗಳಾಯಿತು?
ಹಸಿರ ಸೀರೆ ಹರಿದು
ಕಿತ್ತು , ಬಿರುಕೊಡೆದ
ನೆಲ ಬೆತ್ತಲಾಗಿ,
ನಿನ್ನ ನರನಾಡಿಗಳಲಿ
ಜೀವ ಜಲ ಬತ್ತಿ
ಎದೆ ಹಾಲು ಸೊರಗಿರಲು..
ಬದುಕಲೇ ಬೇಕಾದ
ಅನಿವಾರ್ಯತೆಗೆ
ನಿನ್ನ ಮಕ್ಕಳು
ಹಾಕಿಹರು
ದೇಹದ ಮೇಲೆಲ್ಲಾ
ಸಾವಿರಾರು ಅಡಿಗಳವರೆಗೆ
ಲಕ್ಷಾಂತರ ತೂತುಗಳನ್ನು.
ಆ ಕಾಲಕೆ ಚಿನ್ನದಾ ಹೊಳೆ ಹರಿಸಿ
ಇಡೀ ನಾಡಿಗೆ
ಹೆಮ್ಮೆಯಾಗಿದ್ದ ನೀನು,
ಇಂದು ಬರೀ ದೂಳು,
ಗಾಯಗಳ ಹೊತ್ತು,
ಹನಿ ನೀರಿಗಾಗಿ
ಹಂಬಲಿಸುತ್ತಿರುವೆ,
ನಿನ್ನ ಕಣ್ಣಾಲಿಗಳಿಗೆ
ಹನಿ ನೀರು ಸುರಿಸಲಾಗುತ್ತಿಲ್ಲ.
ಕವಿ ಪುಂಗವರ
ಪದಗಳಲ್ಲಿ ಹಾಡಿ ಹೊಗಳಲ್ಪಟ್ಟ
ನಿನ್ನ ಗತಿ ಯಾರಿಗೂ
ಕಾಣದಂತಾಯ್ತಲ್ಲ..

-ಮಂಸೋರೆ